ನಾವ್ ಯಾರಿಗೇನ್ ಕಮ್ಮಿ ಇಲ್ಲ !
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಸೆಪ್ಟೆ೦ಬರ್ 29 , 2013
|
ಸೆಪ್ಟೆ೦ಬರ್ 27 , 2013
|
ನಾವ್ ಯಾರಿಗೇನ್ ಕಮ್ಮಿ ಇಲ್ಲ !
ಸಿದ್ದಾಪುರ :
ಗಂಡು ಕಲೆಯೆಂದೇ ಹೆಸರಾದ ಯಕ್ಷಗಾನದಲ್ಲೂ ಈಗ ಮಹಿಳೆಯರು ಗೆಜ್ಜೆ ಕಟ್ಟುತ್ತಿದ್ದಾರೆ. ಯಕ್ಷಗಾನದ ಹೆಜ್ಜೆ, ಅಭಿನಯ, ಮಾತುಗಾರಿಕೆ ಕಲಿತು ಸಮರ್ಥವಾಗಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ.ಸಾಗರದಲ್ಲಿ ಮಹಮ್ಮಾಯಿ ಯಕ್ಷಗಾನ ಮಹಿಳಾ ಮಂಡಳಿ ರಚಿಸಿಕೊಂಡ ಸರಸ್ವತಿ ನಾಗರಾಜ್, ಅಹಲ್ಯಾ ಶ್ರೀನಿ ವಾಸ್, ಮೇದಿನಿ, ಮಾನಸ, ಗೀತಾ ಈಶ್ವರ್,ಶೃತಿ,ಉಷಾ ಜೈರಾವ್, ರಾಜ ಲಕ್ಷ್ಮಿ, ವಾಣಿ ಮುಂತಾದ ಮಹಿಳೆಯರು ಈಗಾಗಲೇ ಹಲವಾರು ಯಕ್ಷಗಾನ ಪ್ರಸಂಗ ತರಬೇತಿ ಪಡೆದು ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.ಈ ಮಹಿಳೆಯರಿಗೆ ಕೆಳಮನೆ ಅನುಭವಿ ಭಾಗವತ ಕೆ.ಜಿ.ರಾಮರಾವ್ರ ನೇತೃತ್ವದಲ್ಲಿ ಸಿದ್ದಾಪುರದ ಅಶೋಕ್ ಭಟ್ ತರಬೇತಿ ನೀಡುತ್ತಿದ್ದಾರೆ. ತಾಳಕ್ಕೆ ತಕ್ಕಂತೆ ಹೆಜ್ಜೆ, ಅಭಿಯನ ಹಾಗೂ ಪಾತ್ರಕ್ಕೆ ಪೂರಕವಾಗಿ ಮಾತುಗಾರಿಕೆಯನ್ನು ಕಲಿಯುತ್ತಿದ್ದಾರೆ. ಈ ತಂಡ ಈಗಾಗಲೇ ಕಂಸ ವಧೆ, ಭೀಷ್ಮಪ್ರತಿಜ್ಞೆ ಯಕ್ಷಗಾನ ಪ್ರಸಂಗವನ್ನು ಕಲಿತು ಮೂರ್ನಾಲ್ಕು ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಲವಕುಶ ಪ್ರಸಂಗ ಕಲಿತು ಹೆಗ್ಗೋಡಿನಲ್ಲಿ ಪ್ರದರ್ಶನ ನೀಡಿದ್ದಾರೆ. ಈ ತಂಡ ವರದ ಹಳ್ಳಿಯಲ್ಲಿ ಭೀಷ್ಮಪ್ರ ತಿಜ್ಞೆ ಯಕ್ಷಗಾನ ಪ್ರಸಂಗ ಪ್ರದರ್ಶಿಸಿದೆ.
ತರಬೇತುದಾರ ಅಶೋಕ್ ಭಟ್ ಸಿದ್ದಾಪುರ ಯಕ್ಷಗಾನವನ್ನು ಉಡುಪಿ ಕೇಂದ್ರದಲ್ಲಿ ಕಲಿತವರು.ಯಕ್ಷಗಾನ ರಂಗಭೂಮಿಯಲ್ಲಿ ಇವರು ಬಹುತೇಕ ಎಲ್ಲ ಪಾತ್ರವನ್ನೂ ನಿರ್ವಹಿಸಿದ್ದಾರೆ. ಖ್ಯಾತ ಕಲಾವಿದರೊಂದಿಗೆ ಪಾತ್ರ ಮಾಡಿ ದಕ್ಕಿಸಿಕೊಂಡ ಹಿರಿಮೆ ಇವರದು. ಕಳೆದ 15 ವರ್ಷದಿಂದ ಬೇರೆ ಬೇರೆ ವೃತ್ತಿ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ ಈಗ ಹವ್ಯಾಸಿಯಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಕಲಾಚೇತನ ಸಿದ್ದಾಪುರ ಹೆಸರಲ್ಲಿ ಮನೆಯಲ್ಲೇ ಕೆಲವು ಆಸಕ್ತರಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಕಳೆದ 7-8 ವರ್ಷದಿಂದ ಇವರು ಯಕ್ಷಗಾನ ತರಬೇತು ನೀಡಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ 13 ಜನ ಆಸಕ್ತರಿಗೆ ಶಾಸ್ತ್ರೋಕ್ತವಾಗಿ ಯಕ್ಷಗಾನ ಕಲಿಸುತ್ತಿದ್ದಾರೆ. ಇವರಲ್ಲಿ 12 ವಯೋಮಾನದಿಂದ 55 ರವರೆಗಿನವರೂ ಇದ್ದಾರೆ.
ಅಶೋಕ್ ಭಟ್ ಅವರು ಕೊಂಡ್ಲಿ ಮಹಿಳಾ ತಂಡ, ಹಣಜಿಬೈಲ್ ನವೋದಯ ಯುವಕ ಮಂಡಳಿ, ಕಡಸೂರು ಯುವಕ ಮಂಡಳಿ ಹೀಗೆ ಹಲವಾರು ಕಡೆ ಯಕ್ಷಗಾನ ತರಬೇತಿಯನ್ನು ಕಳೆದ 7-8 ವರ್ಷದಿಂದ ನೀಡುತ್ತಿದ್ದಾರೆ. ಸುಧನಾರ್ಜುನ, ಜಾಂಬವತಿ ಕಲ್ಯಾಣ, ಕಂಸವಧೆ, ಭೀಷ್ಮಪ್ರತಿಜ್ಞೆ ಮುಂತಾದ ಪ್ರಸಂಗಗಳ ತರಬೇತಿ ನೀಡಿದ್ದಾರೆ.
ಮಹಿಳೆಯರು ನಿರ್ವಹಿಸುವ ಪಾತ್ರದಲ್ಲಿ ಸಮಾಧಾನವಿದೆ. ಆದರೆ ಕ್ರೂರ ವೇಷಗಳ ಭಾವ ಅಭಿವ್ಯಕ್ತಿ, ಹೆಜ್ಜೆ ಗಡಸು ಸಾಕಾಗುವುದಿಲ್ಲ. ಸ್ತ್ರೀ ವೇಷ ಹೊರತುಪಡಿಸಿ ಸ್ವರಭಾರ ಕಡಿಮೆ. ಗ್ರಹಿಕೆ ಚೆನ್ನಾಗಿದೆ ಎಂದು ಅಶೋಕ್ ಭಟ್ ಹೇಳುತ್ತಾರೆ. ಒಂದು ಸಣ್ಣ ಯಕ್ಷಗಾನ ಪ್ರಸಂಗವನ್ನು 15-20 ದಿನದಲ್ಲಿ ತರಬೇತು ನೀಡಿ ಪ್ರದರ್ಶನಕ್ಕೆ ಸಿದ್ಧಪಡಿಸಬಹುದು ಎನ್ನುತ್ತಾರೆ.
ಕೃಪೆ : ವಾರ್ತಾಭಾರತಿ
|
|
|